Public News
ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆಯಾಗುತ್ತಿದೆ. ನಮ್ಮ ಮುಖ್ಯಮಂತ್ರಿಯವರ ಬಾಯಿಗುಣ ಸರಿಯಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಬಂದ ಮೇಲೆ ಪ್ರವಾಹ, ಕೋವಿಡ್ ಸಂಕಷ್ಟ ಎದುರಾದವು. ನಮ್ಮ ಜನಪ್ರಿಯ ನಾಯಕ ಬೊಮ್ಮಾಯಿ ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆ ಆಗುತ್ತಿದೆ. ನಮ್ಮ ಬೊಮ್ಮಾಯಿ ಅವರು ತುಂಬ ಜಾಣರಿದ್ದಾರೆ ಅಧ್ಯಯನ ಮಾಡ್ತಾರೆ. ಮುಂದಿನ ದಿನಗಳು ಒಳ್ಳೆಯದು ಬರುತ್ತೆ. ನಮ್ಮ ರಾಜ್ಯ ಕೊರೊನಾ ಮುಕ್ತ ಆಗಬೇಕು ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಮಾಡಲಾಗಿದೆ. ಮೊದಲು ಸಿಎಂ ಜಿಲ್ಲೆಯಲ್ಲಿ ಗೋಶಾಲೆ ಆರಂಭ ಮಾಡುತ್ತೇವೆ. ಪ್ರತಿ ಜಿಲ್ಲೆಗೊಂದು ಗೋಶಾಲೆ ನಮ್ಮ ಅಜೆಂಡ ಆಗಿದೆ. ಪ್ರತಿ ಜಿಲ್ಲೆಗೆ 50ರಿಂದ 100 ಎಕರೆ ಜಾಗದಲ್ಲಿ ಮಾದರಿ ಗೋಶಾಲೆಗಳ ನಿರ್ಮಾಣ ಮಾಡುತ್ತೇವೆ. ದೇಶದ ಇತಿಹಾಸದಲ್ಲಿಯೇ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ ಮಾಡಿದ್ದೇವೆ. ನಾನು ಮಂತ್ರಿಯಾದ್ಮೇಲೆ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.