Public News
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೇಡಿಯಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಕೊರೊನಾ ನಿಭಾಯಿಸುವ ಬಗ್ಗೆ ಸರ್ಕಾರದ ಪ್ರಶ್ನೆಗಳನ್ನು ಕೇಳುತ್ತಿರುವ ಕಾಂಗ್ರೆಸ್ನ "ಜಿಮ್ಮೆದಾರ್ ಕೌನ್ (ಯಾರು ಜವಾಬ್ದಾರರು)" ಅಭಿಯಾನದ ಭಾಗವಾಗಿ ಪ್ರಿಯಾಂಕ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾರತದ ಪ್ರಧಾನಿ ಹೇಡಿಗಳಂತೆ ವರ್ತಿಸಿದ್ದಾರೆ. ಮೋದಿ ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ. ಅವರು ಬರೀ ರಾಜಕೀಯ ಮಾಡುತ್ತಾರೆ. ಸತ್ಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಬರೀ ಪ್ರಚಾರ ಮಾಡುತ್ತಾರೆ" ಎಂದು ದೂರಿದ್ದಾರೆ.
ಹಾಗೆಯೇ "ಈಗ ನಾವು ಪ್ರಧಾನಿ ಮೋದಿಯನ್ನು ಪ್ರಶ್ನಿಸುವ ಸಮಯ ಬಂದಿದೆ, ಇದಕ್ಕೆ ಯಾರು ಜವಾಬ್ದಾರರು? ಪ್ರಧಾನಿ ಮೋದಿ ಸರ್ಕಾರವು ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಈವರೆಗೂ ಸರಿಯಾಗಿ ಪರಿಸ್ಥಿತಿ ನಿಭಾಯಿಸಿಲ್ಲ. ಸರ್ಕಾರ ಬರೀ ಸತ್ಯವನ್ನು ಮರೆಮಾಡಲು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಾತ್ರ ಮಾಡಿದೆ ಎಂದು ದೂರಿದರು.