Kshetra Samachara
ಮಂಗಳೂರು:ಕೊರೊನಾ ಲಾಕ್ ಡೌನ್ ನಿಂದ ತುಳು ನಾಟಕ ಕಲಾವಿದರು ಪ್ರದರ್ಶನವಿಲ್ಲದೆ ಕಂಗಾಲಾಗಿ ಏನೂ ಮಾಡಲಾಗದ ಪರಿಸ್ಥಿತಿಯ ಸಂದರ್ಭದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟ ಪಟ್ಲ ಫೌಂಡೇಶನಿಗೆ ಮನವಿ ಸಲ್ಲಿಸಿದಂತೆ, ಆ ಮನವಿಗೆ ಸ್ಪಂದಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಾಟಕ ಕಲಾವಿದರಿಗೂ ಟ್ರಸ್ಟ್ ವತಿಯಿಂದ, ಅಕ್ಕಿ ದಿನಸಿ ಸಾಮಾಗ್ರಿಗಳನ್ನು ಇಂದು ಕದ್ರಿ ದೇವಸ್ಥಾನದ ಬಳಿಯ ಗೋಕುಲ ಹಾಲಿನಲ್ಲಿ ವಿತರಿಸಲಾಯಿತು.
ಇವರೊಂದಿಗೆ ಲಯನ್ಸ್ ಕ್ಲಬ್ ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವರೆ ಗ್ರೂಪ್ ಕುವೈಟ್ ಕೈಜೋಡಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್ ರವರು ಸ್ವತ: ಹವ್ಯಾಸಿ ಕಲಾವಿದನಾದ ನನಗೆ ನಾಟಕ ಕಲಾವಿದರ ಕಷ್ಟ ಸುಖ ನೋವು ನಲಿವು ಎಲ್ಲವೂ ತಿಳಿದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಾಡುವ ರೀತಿಯಲ್ಲೇ ಸಂಘ ಸಂಸ್ಥೆಗಳು ಸೇರಿ ಆಹಾರದ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯವೆಂದರು. ಕೊರೊನಾದ ಸಂಕಷ್ಟದ ಈ ಸಮಯದಲ್ಲಿ ಮನುಷ್ಯತ್ವ ಮತ್ತು ಮಾನವೀಯತೆ ಮೆರೆದವರನ್ನು ದೇವರು ಎಂದೂ ಕೈಬಿಡುವುದಿಲ್ಲವೆಂದರು.
ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗಲ್ಲದೆ, ಈ ಬಾರಿ ರಂಗಭೂಮಿಯ ಕಲಾವಿದರ ಕುಟುಂಬಕ್ಕೆ ಸಹಕಾರ ನೀಡಿರುವುದಕ್ಕೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಒಕ್ಕೂಟದ ಅಧ್ಯಕ್ಷರಾದ ಕಿಶೋರ್ ಡಿ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷಣ್ ಕುಮಾರ್ ಮಲ್ಲೂರು ತುಳು ನಾಟಕ ಒಕ್ಕೂಟ ಮತ್ತು ಕಲಾವಿದರ ಕುರಿತಾಗಿ ಮಾತಾಡಿದರು.
ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ ಪಟ್ಲ ಫೌಂಡೇಶನಿನ ಕಾರ್ಯಸಾಧನೆಗಳನ್ನು ವಿವರಿಸಿದರು. ಪಟ್ಲ ಫೌಂಡೇಶನಿನ ಸಂಘಟನಾ ಕಾರ್ಯದರ್ಶಿ ಹಾಗೂ ತುಳು ರಂಗಭೂಮಿಯ ಸಕ್ರಿಯ ಸದಸ್ಯರಾದ ಲ! ನವನೀತ ಶೆಟ್ಟಿ ಕದ್ರಿ ಪ್ರಾಸ್ತಾವಿಕ ಮಾತುನ್ನಾಡಿದರು.
ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು, ತಮ್ಮ ಅಮೂಲ್ಯ ಸಮಯದ ಮಧ್ಯೆಯೂ ಕಾರ್ಯಕ್ರಮಕ್ಕೆ ಆಗಮಿಸಿ ಕಿಟ್ ವಿತರಿಸಿದ ಪೋಲಿಸ್ ಕಮಿಷನರ್ ಶಶಿಕುಮಾರ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಗೋಕುಲ್ ಕದ್ರಿ, ಮತ್ತು ಫ್ರೆಂಡ್ಸ್ ತುಳುವರೆ ಗ್ರೂಪ್ ಇವರಿಗೆ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಲಯನ್ಸ್ ಉಪ ರಾಜ್ಯಪಾಲ ವಸಂತ ಶೆಟ್ಟಿ ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಪ್ರೋಫೆಸರ್ ಡಾ! ಮನು ರಾವ್, ಸುದೇಶ್ ಕುಮಾರ್ ರೈ, ಬಾಳ ಜಗನ್ನಾಥ ಶೆಟ್ಟಿ ,ಮಂಗಳೂರು ಘಟಕದ ಅಧ್ಯಕ್ಷರಾದ ಪ್ರದೀಪ್ ಆಳ್ವ ಕದ್ರಿ, ಕ್ಯಾಟ್ಕಾ ಅಧ್ಯಕ್ಷ ಮೋಹನ್ ಕೊಪ್ಪಲ್, ಮಧು ಸುರತ್ಕಲ್, ಗೋವರ್ಧನ ಶೆಟ್ಟಿ, ಶ್ರೀಮತಿ ಸ್ವರೂಪ ಶೆಟ್ಟಿ ಜತೆಗಿದ್ದರು. ತುಳು ನಾಟಕ ಒಕ್ಕೂಟದ ಲ! ತಾರಾನಾಥ ಶೆಟ್ಟಿ ಬೋಳಾರ್ ವಂದಿಸಿದರು.