Hubballi-Dharwad
*ಭ್ರಷ್ಟತೆಯ ಕಪಿ ಮುಷ್ಠಿಯಲ್ಲಿ ದೇಶ ಪ್ರೇಮ ಎಂಬುದು ಸವಕಲು ನಾಣ್ಯವೇ...?!*
ಒಂದು ಉದಾಹರಣೆ ಎಂದು ತೆಗೆದುಕೊಳ್ಳಬಹುದಾದರೆ ನಾನು ಉದ್ಯೋಗ ನಿಮಿತ್ತ ಧಾರವಾಡದಿಂದ ತಾಲ್ಲೂಕು ಕೇಂದ್ರ ಕಲಘಟಗಿಗೆ ಓಡಾಡುವ ರಸ್ತೆಯನ್ನೇ ಉದಾಹರಿಸಬಹುದು. ಈ ರಸ್ತೆ ರಾಜ್ಯ ಹೆದ್ದಾರಿ...! ಇದು ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಗೋವಾ ರಾಜ್ಯ ಸಂಪರ್ಕಿಸುವ ಮುಖ್ಯರಸ್ತೆ. ಧಾರವಾಡ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರ ಕಲಘಟಗಿಯ ದೂರ ಸುಮಾರು 36 ಕಿಲೋಮೀಟರ್. ಈ ರಸ್ತೆ ಸಂಪೂರ್ಣ ಅಧ್ವಾನವಾಗಿದ್ದು ಉಂಟಾಗಿರುವ ಗುಂಡಿಗಳಿಂದಾಗಿ ರಸ್ತೆ ಎಲ್ಲಿದೆ ಎಂದು ಹುಡುಕುವ ಪ್ರಮೇಯ ಬಂದಿದೆ. ವಾಹನ ಸವಾರರು ಸುರಕ್ಷಿತವಾಗಿ ಮನೆ ತಲುಪುವುದು ಅನುಮಾನವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಧಾರವಾಡ-ಕಲಘಟಗಿ ರಸ್ತೆಯ ಸುಮಾರು ಹದಿನೈದು ಕಿಲೋಮಿಟರ್ನಷ್ಟು ಸಂಪೂರ್ಣ ಕಿತ್ತು ಹೊಸದಾಗಿ ಮೆಟಲಿಂಗ್ ಮಾಡಿ ಅದರ ಮೇಲೆ ಡಾಂಬರ್ ಎಳೆದು ಕರಿ ರಸ್ತೆಯನ್ನೆನೋ ನಿರ್ಮಿಸಿತು. ಆದರೆ ಈ ರಸ್ತೆ ನಿರ್ಮಾಣವಾಗಿ ಇನ್ನೂ ಮೂರು ತಿಂಗಳು ಕಳೆದಿಲ್ಲ...! ಮಳೆಯ ಹೊಡೆತ ಹಾಗೂ ಭಾರಿ ವಾಹನಗಳ ಸಂಚಾರದಿಂದ ಹೊಸ ರಸ್ತೆ ಸಂಪೂರ್ಣ ಚಿಂದಿ ಚಿಂದಿಯಾಗಿದೆ. ಮತ್ತು ಇಲ್ಲಿ ರಸ್ತೆ ನವೀಕರಿಸಲಾಗಿತ್ತೆ ಎಂಬ ಸಂಶಯವೂ ಮೂಡುತ್ತದೆ. ನನ್ನ ಅನುಕಂಪ ರಸ್ತೆ ಹಾಳಾಗಿದ್ದಕ್ಕೆ ಅಲ್ಲ....! ಅಥವಾ ನನ್ನಂತಹವರ ತೆರಿಗೆ ಹಣ ಲೂಟಿಯಾಗಿದಗದಕ್ಕೂ ಅಲ್ಲ...! ಬದಲಿಗೆ ರಸ್ತೆ ನಿರ್ಮಿಸಲು ನೀಲಿ ನಕಾಶೆ ತಯಾರಿಸಿ ಮೇಲ್ವಿಚಾರಣೆ ಮಾಡಿದ ಎಂಜಿನಿಯರ್, ಹಣ ಬಿಡುಗಡೆ ಮಾಡಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ರಸ್ತೆ ನವೀಕರಣದ ಕಾಮಗಾರಿ ಕೈಗೊಂಡ ಕಾಂಟ್ರಾಕ್ಟರ್, ಇವರುಗಳ ಲಾಲಾಸೆ, ಸ್ವಾರ್ಥತೆ, ಭ್ರಷ್ಟತೆ ಮೇಲುಗೈ ಸಾಧಿಸಿ ಇವರ ನೈತಿಕತೆ ಅಧಪತನಗೊಂಡಿದ್ದು ಹೇಗೆ? ನನ್ನ ಊರು, ನನ್ನ ತಾಲ್ಲೂಕು, ನನ್ನ ಜಿಲ್ಲೆ ಎಂಬ ಪ್ರೀತಿ,ಅಭಿಮಾನ ಕಿಂಚಿತ್ತು ಹೃದಯದಲ್ಲಿ ಮೂಡದೆ ಇಷ್ಟು ಕುರುಡರಾಗಿದ್ದು ಏಕೆ? ಭ್ರಷ್ಟಾಚಾರದಲ್ಲಿ ಹಣ ಮಾಡುವುದೇ ನಿಮ್ಮ ಗುರಿಯಾದರೆ ಅಂತಹ ಹಣದಲ್ಲಿ ಅದೆಂತಹ ಸುಖ ಪಡುವವರಿದ್ದೀರಿ...?ಭಾರತೀಯತೆ, ದೇಶಪ್ರೇಮ, ಜೈ ಹಿಂದ್, ಇವೆಲ್ಲ ಇವರ ಭ್ರಷ್ಟಚಾರದ ಮುಂದೆ ಸವಕಲು ನಾಣ್ಯವಾಗಿದೆಯೇ...? ನಮ್ಮ ದೇಶ ಪ್ರೇಮ ಎಲ್ಲ ಡೋಂಗಿಯೇ...? ಇಷ್ಟೆಲ್ಲ ಕೋಟಲೆಗಳನ್ನು ಸಹಿಸಿಕೊಂಡು ಏನನ್ನು ಪ್ರತಿಕ್ರಿಯಿಸದೆ ಮೌನವಾಗಿ ಸಹಿಸಿಕೊಂಡು ಅದೇ ರಸ್ತೆಯಲ್ಲಿ ಓಡಾಡುವ ಪ್ರಾಮಾಣಿಕ ತೆರಿಗೆದಾರ ಪ್ರತಿಭಟಿಸದಂತೆ ತಡೆದ ಅಂಶಗಳು ಯಾವುದು?
ನಮ್ಮ ಶಿಕ್ಷಣ ವ್ಯವಸ್ಥೆ, ನಮ್ಮ ಸಂವಿಧಾನದಲ್ಲಿನ, ನಮ್ಮ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳುವಲ್ಲಿ ಏಕೆ ವೈಫಲ್ಯವಾಗಿದೆ? ಎಂಬುದು ನನ್ನ ಈ ಹೊತ್ತಿನ ಪ್ರಶ್ನೆಯಾಗಿದ್ದು, ಈ ಧಾರವಾಡ ಕಲಘಟಗಿ ರಸ್ತೆಯ ನವೀಕರಣದ ಕಳಪೆ ಕಾಮಗಾರಿ ಒಂದು ಸಣ್ಣ ಉದಾಹರಣೆಯಾಗಿ ಬಳಸಿಕೊಂಡು ದೇಶದ ಭ್ರಷ್ಟ ವ್ಯವಸ್ಥೆಗೆ ನನ್ನ ಸವಾಲಿನ ಪ್ರಶ್ನೆಯಾಗಿದೆ...!?
*ಅಶೋಕ ಪ ಹೊನಕೇರಿ*
*ಧಾರವಾಡ*