Kshetra Samachara
ಮುಲ್ಕಿ: ಶರನ್ನವರಾತ್ರಿಯ ಸಂಭ್ರಮದಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ದೇವಸ್ಥಾನಕ್ಕೆ ಆಗಮಿಸಿದ ಶ್ರೀಪಾದರನ್ನು ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ಹಾಗೂ ಆಡಳಿತ ಮೊಕ್ತೇಸರರು ಸ್ವಾಗತಿಸಿದರು.
ಶರನ್ನವರಾತ್ರಿಯ ಪ್ರಯುಕ್ತ ದೇವಸ್ಥಾನದಲ್ಲಿ ಇಂದು ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕಕ್ವ ಗುತ್ತು ಶಾಂತ ಸಂಜೀವ ಭಂಡಾರಿ ಸೇವಾರ್ಥ ಚಂಡಿಕಾ ಯಾಗ ನಡೆಯಿತು.
ರಾತ್ರಿ ಹಯೋಧನ ಭಜನಾ ಮಂಡಳಿ ಪಣಂಬೂರು, ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಬೆಳ್ಳಂಪಳ್ಳಿ, ಪರ್ಕಳ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಕುಣಿತ ಭಜನಾ ಸಂಕೀರ್ತನೆ ನಡೆಯಿತು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಪಟೇಲ್ ವಾಸುದೇವ ರಾವ್ ಪುನರೂರು, ಗೋಪಾಲಕೃಷ್ಣ ಭಟ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು, ಮಹಿಮ್ ಹೆಗ್ದೆ , ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.