Kshetra Samachara
ಧಾರವಾಡ: ಅಧಿಕಾರಕ್ಕಾಗಿ ಮೊನ್ನೆಯಷ್ಟೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯದರ್ಶಿ ಎಸ್.ರಾಧಾಕೃಷ್ಣನ್ ಅವರು 18 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಮಲ್ಲಪ್ಪ ಪುಡಲಕಟ್ಟಿ, ಲಿಂಗರಾಜ ಸರ್ದೇಸಾಯಿ, ಪಾಲಾಕ್ಷ ಕತ್ತಿಶೆಟ್ಟರ್, ರಾಯಪ್ಪ ಪುಡಲಕಟ್ಟಿ, ಸುಭಾಷ ಸಮಶೆಟ್ಟಿ, ಉಳವಿಬಸಪ್ಪ ಅಂಗಡಿ, ಪ್ರೇಮಲತಾ ಅಂಗಡಿ ಸೇರಿದಂತೆ ಒಟ್ಟು 18 ಜನರ ಮೇಲೆ ದೂರು ದಾಖಲಿಸಲಾಗಿದೆ.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಆಡಳಿತ ಮಂಡಳಿಗೆ ಧಾರವಾಡ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನೀವು ಅಧಿಕಾರ ಬಿಟ್ಟುಕೊಡಬೇಕು ಎಂದು ಗುಂಪು ಗುಂಪಾಗಿ ಬಂದು ದಾಂಧಲೆ ನಡೆಸಿದ್ದಾರೆ. ನಮ್ಮನ್ನು ಕೆಲಸ ಮಾಡಲೂ ಬಿಡದೇ ತೀವ್ರ ದಾಂಧಲೆ ನಡೆಸಿದ್ದಾರೆ. ಚೆನ್ನೈದಿಂದ ಅಧಿಕೃತ ಆದೇಶ ಬಂದಾಗ ಮಾತ್ರ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರೂ ಕೇಳದೇ ನಿಮ್ಮನ್ನು ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಅಂತಾ ಕಾರ್ಯದರ್ಶಿ ಎಸ್.ರಾಧಾಕೃಷ್ಣನ್ ಆರೋಪಿಸಿದ್ದಾರೆ.
ಸದ್ಯ ದೂರು ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.