PublicNext
ದಾವಣಗೆರೆ: ಬಸವರಾಜ್ ಬೊಮ್ಮಾಯಿ ನಾನು ಹಲವು ವರ್ಷಗಳ ಸ್ನೇಹಿತರು. ನಾನು ಬಿಜೆಪಿ ಕಾರ್ಯಕರ್ತ, ಅವ್ರು ಈಗ ಸಿಎಂ. ಎಂಎಲ್ ಸಿ ಆಗಿದ್ದಾಗಿನಿಂದಲೂ ಬೊಮ್ಮಾಯಿ ನನ್ನ ನಡುವೆ ಉತ್ತಮ ಬಾಂಧವ್ಯ ಇದೆ. ಹೈಕಮಾಂಡ್ ಯಾಕೆ ನನ್ನನ್ನು ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಹೆಚ್ಚು ಕಡಿಮೆಯಾದರೆ ಸಿಎಂ ಗೌರವಕ್ಕೆ ಧಕ್ಕೆ ಬರುತ್ತೆ ಎಂಬ ಮಾತು ಆಡಿದ್ದಾರೆ. ಚರ್ಚೆ ನಡೆಸಿದ್ದಾರೆ. ಮೊದಲು ಹೋಗಿ ಸಮುದಾಯದ ಮುಖಂಡರನ್ನು ಭೇಟಿ ಮಾಡುತ್ತೇನೆ. ಮುಂದೆ ಏನು ಮಾಡಬೇಕು ಎಂಬ ಸೂಕ್ತ ನಿರ್ಧಾರಕ್ಕೆಬರುವುದಕ್ಕಾಗಿಯೇ ಹಾನಗಲ್ ನಲ್ಲಿ ನಾಳೆ ಸಭೆ ಕರೆದಿದ್ದೇನೆ. ಅಲ್ಲಿ ಪ್ರಕಟಿಸುತ್ತೇನೆ. ಈಗಲೇ ಏನನ್ನೂ ಸ್ಪಷ್ಟವಾಗಿ ಹೇಳಲು ಆಗದು ಎಂದು ಬಿಜೆಪಿ ಮುಖಂಡ ಸಿ. ಆರ್. ಬಳ್ಳಾರಿ ಹೇಳಿದ್ದಾರೆ.
ಜಿಎಂಐಟಿಯಲ್ಲಿ ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಎಲ್ಲಾ ನಿರ್ಧಾರವನ್ನು ನಾನೇ ತೆಗೆದುಕೊಳ್ಳಲು ಆಗಲ್ಲ. ಸಮಾಜದ ಮುಖಂಡರು ನನ್ನ ತೀರ್ಮಾನ ಒಪ್ಪಬೇಕು. ಸ್ವಾಮೀಜಿಯವರು ಯಾವುದೇ ಕಾರಣಕ್ಕೆ ರಾಜಕೀಯ ಮಾಡಲ್ಲ. ಸಮಾಜ ನನ್ನ ಕಡೆ ಇದೆ. ಮತ್ತೆ ಮರಳಿ ಸಮಾಜಕ್ಕೆ ಹೊರಟಿದ್ದೇನೆ. ರಾಜಕೀಯ ಆಳ, ಅಗಲ ಅರಿಯಲು ನಮ್ಮಿಂದನೂ ಆಗದು, ನಿಮ್ಮಿಂದಲೂ ಆಗದು ಎಂದು ಮಾರ್ಮಿಕವಾಗಿ ಉತ್ತರ ನೀಡಿದರು.
ಹಾನಗಲ್ ನಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಬಿಜೆಪಿ ಮುಖಂಡ ಸಿ. ಆರ್. ಬಳ್ಳಾರಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಜಿಎಂಐಟಿಯಲ್ಲಿ ಬಳ್ಳಾರಿ ಅವರ ಜೊತೆ ಮಾತುಕತೆ ನಡೆಸಿದರೂ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ನಾಳೆ ಸಮಾಜದ ಮುಖಂಡರ ಸಭೆಯನ್ನು ಹಾನಗಲ್ ನಲ್ಲಿ ಕರೆದಿದ್ದು, ಅಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ಹೇಳುವ ಮೂಲಕ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಇಲ್ಲವೋ ಎನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.
ಜಿಎಂಐಟಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಸಿ. ಆರ್. ಬಳ್ಳಾರಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನೀವು ಕಣಕ್ಕಿಳಿದರೆ ನಮಗೆ ಕಷ್ಟವಾಗುತ್ತದೆ. ನಾನು ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಆಗಿರುವುದರಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ, ಬಳ್ಳಾರಿ ಅವರು ಈ ಬಗ್ಗೆ ಇಂದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಏನಿದ್ದರೂ ಸಮಾಜದ ಮುಖಂಡರು ಹಾಗೂ ಸಮಾಜದ ಶ್ರೀಗಳ ಜೊತೆ ಚರ್ಚಿಸಿದ ಬಳಿಕವೇ ಸ್ಪರ್ಧೆ ಬಗ್ಗೆ ಹೇಳುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.