Kshetra Samachara
ಉಡುಪಿ: ಶ್ರೀಕೃಷ್ಣಮಠದಲ್ಲಿ ನಾಳೆ ಅಷ್ಠಮಿ ಮತ್ತು ನಾಡಿದ್ದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ,ಕೃಷ್ಣನಗರಿಗೀಗ ಹಬ್ಬದ ಕಳೆ ಬಂದಿದೆ.ಆದರೆ ಕೋವಿಡ್ ನಿಯಮಾವಳಿ ಇರುವುದರಿಂದ ಈ ವರ್ಷ ಹೆಚ್ಚಿನ ಸಂಭ್ರಮ ಇರುವುದಿಲ್ಲ. ಎಂದಿನಂತೆ ಪೂಜೆಗಳು ಸಂಪ್ರದಾಯಬದ್ಧವಾಗಿ ನಡೆಯಲಿವೆ. ಶ್ರೀಕೃಷ್ಣ ಜನ್ಮಾಷ್ಟಮಿ ಪರ್ವಕಾಲದಲ್ಲಿ ಬೆಳಿಗ್ಗೆ ಮಹಾಪೂಜೆಯ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ನಡೆಸಲಿದ್ದಾರೆ.
ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ ಮತ್ತು ಕೊಳಲು ವಾದನ ಕಛೇರಿ ನಡೆಯಲಿದೆ.
ಶ್ರೀಕೃಷ್ಣ ಜಯಂತಿ ಮತ್ತು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ದಿನದಂದು ಶ್ರೀಕೃಷ್ಣ ದರ್ಶನವಾಗಬೇಕೆಂಬ ಶ್ರೀಕೃಷ್ಣ ಭಕ್ತರ ಹಂಬಲದಂತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 30, ಸೋಮವಾರದಂದು ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಿರಂತರ ಶ್ರೀಕೃಷ್ಣ ದರ್ಶನದ ಅವಕಾಶವಿರುತ್ತದೆ. ಆಗಸ್ಟ್ 31, ಮಂಗಳವಾರದಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ ಒಂದು ಗಂಟೆವರೆಗೆ, ನಂತರ ಶ್ರೀದೇವರ ರಥೋತ್ಸವದ ಬಳಿಕ ಸಂಜೆ 5 ಗಂಟೆಯಿಂದ ಶ್ರೀಕೃಷ್ಣ ದರ್ಶನಕ್ಕೆ ಅವಕಾಶವಿರುತ್ತದೆ.ಶ್ರೀಕೃಷ್ಣ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿ, ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಶ್ರೀದೇವರ ದರ್ಶನ ಪಡೆದು ಸಹಕರಿಸಬೇಕಾಗಿ ಪರ್ಯಾಯ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಭಕ್ತರಿಗೆ ಹಂಚಲು ಸಾವಿರಾರು ಸಂಖ್ಯೆಯಲ್ಲಿ ಉಂಡೆ ಚಕ್ಕುಲಿ ಪ್ರಸಾದವನ್ನು ನುರಿತ ಬಾಣಸಿಗರು ಸಿದ್ಧಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.