Public News
ಹಿರಿಯೂರು: ಯಾವುದೇ ಒಂದು ಸರ್ಕಾರಿ ಕಾಮಗಾರಿಗಳು ಹಗಲಿನಲ್ಲಿ ನಡೆಯುವುದು ಹಾಗೂ ಸಕಾಲದಲ್ಲಿ ಮುಗಿಸುವುದು ಸರ್ವೇ ಸಾಮಾನ್ಯ.ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಗಾಂಧಿ ವೃತ್ತದ ನೆಹರೂ ಮಾರುಕಟ್ಟೆ ಪಕ್ಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ನಗರಸಭೆಯ ಅಧಿಕಾರಿಯೊಬ್ಬರು ಗುತ್ತಿಗೆದಾರನ ಮೂಲಕ ತರಾತುರಿಯಲ್ಲಿ ರಾತ್ರೋರಾತ್ರಿ ಕಾಮಗಾರಿಯನ್ನು ಕಟ್ಟಿ ಮುಗಿಸಲು ಮುಂದಾಗಿದ್ದು, ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಚಿಕ್ಕ ಸಾರ್ವಜನಿಕ ಸ್ಥಳದಲ್ಲಿ ತರಾತುರಿಯಲ್ಲಿ ಕಾಮಗಾರಿ ಬೇಡ ಎಂಬಸಾರ್ವಜನಿಕರ ಆಕ್ಷೇಪಣೆಗೆ, ಸ್ಥಳಕ್ಕೆ ನಗರಸಭೆಯ ಇಬ್ಬರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೌರಾಯುಕ್ತರ ಸೂಚನೆ ಮೇರೆಗೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಈ ಸಂಬಂಧ ನಗರಸಭೆ ಎಇಇ ಅವರನ್ನು ಮಾಹಿತಿ ಪಡೆಯಲು ಸಂಪರ್ಕಿಸಿದಾಗ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.ಇನ್ನು ಕಾಮಗಾರಿ ಕಟ್ಟಡ ಯಾವುದೇ ತಳಪಾಯ ಇಲ್ಲದೆ, ಕಾಂಕ್ರೀಟ್ ಮಾಡಿರುವ ಜಾಗದ ಮೇಲೆ ಇಟ್ಟಿಗೆ ಇಟ್ಟು RO ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಪ್ಲಾಂಟ್ ನಿರ್ಮಾಣ ಸಂಪೂರ್ಣ ಕಳಪೆಯಿಂದ ನಿರ್ಮಾಣವಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.