Kshetra Samachara
ಮುಲ್ಕಿ: ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಕಟೀಲು ಶ್ರೀನಿಕೇತನ ಸಭಾಭವನದಲ್ಲಿ "ಮಹಿಳಾ ಸಮ್ಮಿಲನ" ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಗಂಧಿ ಕೊಂಡಾಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಬಿಜೆಪಿ ಭ್ರಷ್ಟಾಚಾರದ ಮೂಲಕ ಆಡಳಿತ ನಡೆಸುತ್ತಿದ್ದು, ಮಹಿಳೆಯರು ಸಂಘಟಿತರಾಗಿ ಸೋನಿಯಾ ಗಾಂಧಿಯವರ ಕೈ ಬಲಪಡಿಸಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು. ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇಕಡಾ 30 ಮೀಸಲಾತಿ ಸಹಿತ ಅನೇಕ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿದ್ದನ್ನು ಸ್ಮರಿಸಿದ ಅವರು ಪಕ್ಷ ಸಂಘಟನೆಗೆ ಒತ್ತು ನೀಡಿ ಮುಂಬರುವ ಚುನಾವಣೆಗಳಿಗೆ ಸಿದ್ಧರಾಗಿ ಎಂದರು.
ಈ ಸಂದರ್ಭ ಪಕ್ಷದ ಹಿರಿಯ ನಿಷ್ಠಾವಂತ ಕಾರ್ಯಕರ್ತರಾದ ಸುಗುಣ ಪೂಜಾರಿ ಉಲ್ಲಂಜೆ, ಜೈನಾಬಿ ಕಿನ್ನಿಗೋಳಿ, ರೋಸಿ ಪಿಂಟೋ ಕಿನ್ನಿಗೋಳಿ ರವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ಕಾಂಗ್ರೆಸ್ ನಾಯಕರಾದ ಪ್ರಮೋದ್ ಕುಮಾರ್, ಶೈಲಾ ಸಿಕ್ವೇರಾ, ಟಿಎಚ್ ಮಯ್ಯದ್ದಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ತಿಮ್ಮಪ್ಪ ಕೋಟ್ಯಾನ್ ಕಟೀಲು, ರಮಾನಂದ ಪೂಜಾರಿ, ಅನಿತಾ ಕಿನ್ನಿಗೋಳಿ ಉಪಸ್ಥಿತರಿದ್ದರು.