Kshetra Samachara
ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ತ್ಯಾಜ್ಯವನ್ನು ಲಿಂಗಪ್ಪಯ್ಯಕಾಡಿನ ಆಶ್ರಯ ಕಾಲೊನಿ ಬಳಿ ಡಂಪ್ ಮಾಡುವ ನಪಂ ಆಡಳಿತದ ವಿರುದ್ಧ ಲಿಂಗಪ್ಪಯ್ಯಕಾಡು ಆಶ್ರಯ ಕಾಲೊನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತ್ಯಾಜ್ಯ ತುಂಬಿದ ಟಿಪ್ಪರ್ ಸಂಚರಿಸದಂತೆ ರಸ್ತೆ ತಡೆ ನಡೆಸಿದರು.
ಮುಲ್ಕಿ ನಪಂ ವ್ಯಾಪ್ತಿಯ ತ್ಯಾಜ್ಯವನ್ನು ರುದ್ರಭೂಮಿ ಬಳಿ ನಿರ್ಮಿಸಿರುವ ಬೃಹತ್ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಹಲವು ವರ್ಷಗಳಿಂದ ಡಂಪ್ ಮಾಡುತ್ತಿದ್ದು, ಅಲ್ಲಿ ತ್ಯಾಜ್ಯ ತುಂಬಿದ ಕಾರಣ ತ್ಯಾಜ್ಯವನ್ನು ಲಿಂಗಪ್ಪಯ್ಯಕಾಡಿನ ಶಾಲೆ ಬಳಿ ಅಥವಾ ಆಶ್ರಯ ಕಾಲೊನಿ ಹತ್ತಿರ ಹಾಕಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ, ಇಂದು ಬೆಳಗ್ಗೆ ತ್ಯಾಜ್ಯ ಹೊತ್ತ ಟಿಪ್ಪರ್ ಲಿಂಗಪ್ಪಯ್ಯಕಾಡು ಪರಿಸರಕ್ಕೆ ಬರುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಟಿಪ್ಪರ್ ಸಂಚರಿಸದಂತೆ ಕಲ್ಲುಗಳನ್ನಿಟ್ಟು ಪ್ರತಿಭಟನೆ ನಡೆಸಿದರು.
ಸ್ಥಳೀಯರೊಬ್ಬರು ಮಾತನಾಡಿ, ಪರಿಸರದಲ್ಲಿ ತ್ಯಾಜ್ಯ ಹಾಕುವುದರಿಂದ ಕುಡಿಯುವ ನೀರಿನ ಸಮಸ್ಯೆ ಸಹಿತ ಅನೇಕ ತೊಂದರೆ ಎದುರಾಗಲಿದೆ ಎಂದರು.
ಮಹಿಳೆಯೊಬ್ಬರು ಪ್ರತಿದಿನ ಕೆಸರು ನೀರು ಬರುತ್ತಿದೆ ಸಮಸ್ಯೆ ಕೇಳುವವರಿಲ್ಲ ಎಂದು ಹೇಳಿ, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡು ತ್ಯಾಜ್ಯ ವಿಲೇವಾರಿಗೆ ತಡೆಯೊಡ್ಡಿದರು.
ಬಳಿಕ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶಮೀರ್, ಮಾಜಿ ಪಂ. ಸದಸ್ಯ ಬಶೀರ್ ಕುಳಾಯಿ ಮಧ್ಯಪ್ರವೇಶಿಸಿ, ಸ್ಥಳಕ್ಕೆ ತಂದಿರುವ ಕೇವಲ 6 ಲೋಡ್ ತ್ಯಾಜ್ಯ ಡಂಪ್ ಮಾಡಿ, ಅದರ ಮೇಲೆ ಮಣ್ಣು ಹಾಕಿ, ಪೂರ್ತಿ ಮುಚ್ಚಬೇಕೆಂಬ ಮುಚ್ಚಳಿಕೆ ಯೊಂದಿಗೆ ಸ್ಥಳೀಯರನ್ನು ಸಮಾಧಾನಪಡಿಸಿ ತ್ಯಾಜ್ಯವನ್ನು ತಾತ್ಕಾಲಿಕ ನೆಲೆಯಲ್ಲಿ ಡಂಪ್ ಮಾಡಲಾಯಿತು.
ಬಳಿಕ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ತಡೆಯೊಡ್ಡುವುದು ಸರಿಯಲ್ಲ. ನ.ಪಂ. ಅಭಿವೃದ್ಧಿಗೆ ನಾಗರಿಕರ ಸಹಕಾರ ಮುಖ್ಯ ಎಂದರು. ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್ ಮತ್ತಿತರರಿದ್ದರು.