Kshetra Samachara
ಬೈಂದೂರು: 50ಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಇರುವ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು, ಉತ್ತಮ ರೀತಿಯಲ್ಲಿ ಲಾಕ್ಡೌನ್ ವ್ಯವಸ್ಥೆ ಮಾಡಿರುವುದಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದ ಶಾಸಕರು, ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್ ಕೈಗೊಂಡ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅನ್ಲಾಕ್ ಆದ ಬಳಿಕ ಜನರು ಮೈಮರೆಯದೆ ಕಾಲಕಾಲಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಕೊರೊನಾ ನಿಯಂತ್ರಣದಲ್ಲಿ ಹಗಲಿರುಳು ದುಡಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಹಾಗೂ ಎಲ್ಲಾ ಕೊರೊನಾ ವಾರಿಯರ್ಸ್ ಕಾರ್ಯ ಶ್ಲಾಘನೀಯ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಸರಕಾರ ಪರಿಹಾರದ ಪ್ಯಾಕೇಜ್ ಘೋಷಿಸಿದ್ದು, ಪ್ಯಾಕೇಜ್ ಪಡೆಯಲು ಅರ್ಹವಾಗಿರುವ ಎಲ್ಲಾ ವರ್ಗದ ಜನರು ಜೂನ್14ರೊಳಗಾಗಿ ಸೇವಾಸಿಂಧುವಿನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ಬಿ.ರಾಘವೇಂದ್ರ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಸಾವಿತ್ರಿ ಖಾರ್ವಿ, ಪ್ರಶಾಂತ ಖಾರ್ವಿ, ನಿರ್ಮಲಾ ಪೂಜಾರಿ, ಶಾಂತಿ ಖಾರ್ವಿ, ಅಕ್ಕಮ್ಮ ಆಶಾ ಕಾರ್ಯಕರ್ತೆಯರಾದ ಕಲ್ಪನಾ ಶೇರುಗಾರ್, ಭಾಗ್ಯ ಉಪಸ್ಥಿತರಿದ್ದರು.