Kshetra Samachara
ಮುಂಬೈ: ಹಸುಗೂಸಿಗೆ ಚಿತ್ರಹಿಂಸೆ ನೀಡಿ ನಿದ್ರಿಸುತ್ತಿದ್ದ ಆರೋಪದ ಮೇಲೆ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ದಾದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಐರಿನ್ ವಾಸ್ ಬಂಧಿತ ದಾದಿ. ಮುಂಬೈ ವಾಶಿ ಇಲ್ಲಿನ ಮಂಗಳೂರು ಮೂಲದ ಶ್ರೀಮಂತ ಮತ್ತು ಪ್ರತಿಷ್ಠಿತ ಸೆರಾವೋ ಕುಟುಂಬದ ನವದಂಪತಿಗಳಿಗೆ ಗಂಡು ಮಗು ಜನಿಸಿದ್ದು, ಬಾಣಂತಿಯ ಆರೈಕೆಗಾಗಿ ಐರಿನ್ ವಾಸ್ ಅವರನ್ನು ನೇಮಕ ಮಾಡಲಾಗಿತ್ತು. ಒಂದು ವಾರದ ಬಳಿಕ ಮಗು ಏಕಾಏಕಿ ಬಿಕ್ಕಿಬಿಕ್ಕಿ ಅಳುವುದಕ್ಕೆ ಆರಂಭಿಸಿದ್ದು, ದಿನೇ ದಿನೇ ಮಗುವಿನ ತಡೆಯಲಾರದ ರೋದನೆ ಕಂಡು ಪಾಲಕರು ಮಗುವನ್ನು ಕುಟುಂಬ ವೈದ್ಯರಲ್ಲಿ ಕರೆದುಕೊಂಡು ಹೋಗಿದ್ದರು. ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತು ಕೊಂಡಿದ್ದ ಕೈಕಾಲುಗಳನ್ನು ಗಮನಿಸಿ, ದಾದಿಯ ನಡೆಯ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದರು.
ವೈದ್ಯರ ಸಲಹೆ ಬಳಿಕ ಮಗುವಿನ ಪೋಷಕರು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಈ ವೇಳೆ ದಾದಿಯ ವಿಕೃತಿ ಬಯಲಾಗಿದ್ದು, ಆಕೆಯ ವರ್ತನೆ ಕಂಡು ಮನೆಮಂದಿ ಬೆಚ್ಚಿಬಿದ್ದಿದ್ದಾರೆ. ಬಳಿಕ ವಿಡಿಯೋವನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಐರಿನ್ ವಾಸ್ಳನ್ನು ಬಂಧಿಸಿದ್ದಾರೆ.