Kshetra Samachara
ಉಡುಪಿ; ಉಡುಪಿ ಚೈಲ್ಡ್ ಲೈನ್ ವತಿಯಿಂದ ನಡೆದ ವಿಶ್ವ ಬಾಲಕಾರ್ಮಿಕ ವಿರೋದಿ ದಿನಾಚರಣೆ ಕಾರ್ಯಕ್ರಮವು ಜಿಲ್ಲಾಪಂಚಾಯತ್ ಕಚೇರಿ ಯಲ್ಲಿ ನಡೆಯಿತು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಅವರು ಜನಜಾಗೃತಿಗಾಗಿ ಈ ಸಂಬಂಧ ಹೊರತಂದ ಪೊಸ್ಟರನ್ನು ಬಿಡುಗಡೆ ಮಾಡುತ್ತಾ ಪ್ರತಿಯೊಂದು ಗ್ರಾಮದಲ್ಲಿ ಬಾಲಕಾರ್ಮಿಕತ್ವಕ್ಕೆ ಮೂಲಕಾರಣ. ಶಾಲೆಯಿಂದ ಹೊರಗುಳಿದ ಮಕ್ಕಳು, ಕೊವೀಡ್ ನಿಂದಾಗಿ ಅಥವಾ ಬೇರೆ ಬೇರೆ ಕಾರಣಗಳಿಂದ ಆಗಿದ್ದು ಅವರನ್ನು ಶಾಲೆಗೆ ಬರುವಂತೆ ಮಾಡುವ ಬಗ್ಗೆ ಸಂಬಂಧಪಟ್ಟ ಎಲ್ಲರೂ ಪ್ರಯತ್ನಿಸಬೇಕೆಂದು ತಿಳಿಸಿದರು. ಈ ಬಗ್ಗೆ ಈಗಾಗಲೇ ಸರ್ವೆ ಮಾಡಲು ಗ್ರಾಮ ಶಿಕ್ಷಣ ಸಮಿತಿಗೆ ತಿಳಿಸಿದ್ದು ಅದರ ವರದಿಯ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಬಾಲಕಾರ್ಮಿಕ ಮುಕ್ತ ಗ್ರಾಮಗಳಾಗುವಂತೆ ಮಾಡುವಲ್ಲಿ ಎಲ್ಲರ ಸಹಬಾಗಿತ್ವವನ್ನು ಕೋರಿದರು.
ಹಾಜರಿದ್ದ ಎಲ್ಲಾ ಬಾಗಿದಾರರಿಗೆ ಬಾಲಕಾರ್ಮಿಕ ಕೊನೆಗಾಣಿಸುವಲ್ಲಿ ಅವರ ಬಾಧ್ಯತೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಅವರು ಸಾರ್ವಜನಿಕರು ಯಾವುದೇ ಮಗು ಎಲ್ಲೆ ಬಾಲಕಾರ್ಮಿಕನಾಗಿ ದುಡಿಯುತ್ತಿರುವದನ್ನು ಕಂಡಲ್ಲಿ ಕೂಡಲೆ 1098 ಚೈಲ್ಡ್ ಲೈನ್ ಗೆ ಕರೆ ಮಾಡಿ ತಿಳಿಸಿದಲ್ಲಿ ಅ ಮಗುವನ್ನು ಅದರಿಂದ ಮುಕ್ತಿಗೊಳಿಸಲು ಸಹಾಯ ವಾಗುತ್ತದೆಂದು ತಿಳಿಸಿದರು. ಎಲ್ಲರ ಸಹಕಾರದಿಂದ ಉಡುಪಿಯು ಬಾಲಕಾರ್ಮಿಕ ಮುಕ್ತ ಜಿಲ್ಲೆ ಆಗಲೆಂದು ಆಶಿಸಿದರು. ಪ್ರಾರಂಭದಲ್ಲಿ ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ ಈ ದಿನದ ಮಹತ್ವವನ್ನು ತಿಳಸಿದರು ಮತ್ತು ಜಿಲ್ಲಾಪಂಚಾಯತ್ ಸಹಯೋಗ ದೊಂದಿಗೆ ಬಾಲಕಾರ್ಮಿಕ ಮುಕ್ತ ಗ್ರಾಮಗಳನ್ನು ಗುರುತಿಸಿ ಗೌರವಿಸಲಾಗುವುದೆಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ವರ್ಗವಾಗಿ ತೆರಳಲಿರುವ ಶ್ರೀಮತಿ ಕಾವೇರಿ ಯವರನ್ನು ಚೈಲ್ಡ್ ಲೈನ್ ವತಿಯಿಂದ ಅಭಿನಂದಿಸಲಾಯ್ತು. ಈ ಕಾರ್ಯಕ್ರಮ ದಲ್ಲಿ ಮಾಜಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ನಾರಾಯಣ ಬಿ.ಕೆ., ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ವರ್ಣೇಕರ್, ಕಾರ್ಮಿಕ ನಿರೀಕ್ಷಕ ಪ್ರವೀಣ್, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಚೈಲ್ಡ್ ಲೈನ್ ಸಹನಿರ್ಧೇಶಕ ಗುರುರಾಜ. ಭಟ್, ಸಂಯೋಜಕಿ ಕಸ್ತೂರಿ ಮತ್ತು ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು