Public News
ದಾವಣಗೆರೆ: "ತಾಲೂಕು ಆಡಳಿತ, ಸಿಪಿಐ ನನ್ನ ಮೇಲೆ ಕೇಸ್ ಹಾಕಲಿ. ಇಂತ ನೂರಾರು ಪ್ರಕರಣ ಎದುರಿಸಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಬರ್ಲಿ ನೋಡೋಣ, ಬಂಧಿಸಲಿ. ಎಲ್ಲಿಗೆ ಹೋಗುತ್ತೆ ನೋಡೋಣ. ಎಸ್ಪಿ ಅವರು ಬೇಕಾದರೆ ಕೇಸ್ ಹಾಕಲಿ. ಇಲ್ಲಿಗೆ ಬಂದು ಸೋಂಕಿತರ ಯೋಗಕ್ಷೇಮ ವಿಚಾರಿಸಿದ್ದೀರಾ. ನನ್ನ ಕೊನೆಯ ಉಸಿರು ಇರುವವರೆಗೆ ಯಾವ ಅಧಿಕಾರಿಗಳು ಏನೂ ಮಾಡಕ್ಕಾಗಲ್ಲ. ನನ್ನ ಮೇಲೆ ಕೇಸ್ ಹಾಕ್ತೀರಾ. ತಾಕತ್ತಿದ್ದರೆ ಎಸ್ಪಿನೇ ಬಂದು ಕೇಸ್ ಹಾಕಲಿ ನೋಡಿಕೊಳ್ಳುತ್ತೇನೆ. ನನ್ನನ್ನು ಹೆದರಿಸ್ತೀರಾ. ಇದಕ್ಕೆ ಜಗ್ಗುವುದಿಲ್ಲ'' ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಶುಕ್ರವಾರ ಶಾಸಕ ಎಂ. ಪಿ. ರೇಣುಕಾಚಾರ್ಯ ದಂಪತಿ ಹೋಮ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ತಾಲೂಕು ಆಡಳಿತ ಮುಂದಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸೋಂಕಿತರು ಧರಣಿ ಕುಳಿತ ವೇಳೆ ಮಾತನಾಡಿದ ಅವರು ಕೋವಿಡ್ ಕೇರ್ ಸೆಂಟರ್ ನಲ್ಲೇ ಇರುತ್ತೇನೆ. ಕೆಲವರಿಗೆ ಇಲ್ಲಿ ಮಾಡಿರುವ ಉತ್ತಮ ವ್ಯವಸ್ಥೆ ಮಾಡಿದ್ದನ್ನು ನೋಡಿ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ನಾನು ಸತ್ತರೂ ಇಲ್ಲಿಂದ ಹೋಗೋಲ್ಲ ಎಂದರು.
ತಹಶೀಲ್ದಾರ್ ವಿರುದ್ದ ಘೋಷಣೆ ಕೂಗಿದ ಸೋಂಕಿತರು, ತಹಶೀಲ್ದಾರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಅವರು ಬರುವವರೆಗೆ ಉಪಹಾರ ಸೇವಿಸುವುದಿಲ್ಲ ಎಂದು ಧರಣಿ ಕುಳಿತರು. ಕೇರ್ ಸೆಂಟರ್ ನಲ್ಲಿ ನಮಗೆಲ್ಲಾ ಒಳ್ಳೆಯ ತಿಂಡಿ, ಊಟ, ಉತ್ತಮ ವಾತಾವರಣ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕ ರೇಣುಕಾಚಾರ್ಯ ಅವರು ಸಹ ಇಲ್ಲೇ ತಂಗಿದ್ದಾರೆ. ಉಸ್ತುವಾರಿಯನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ. ಇಂಥ ವೇಳೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ನೀಡಿದರು.