Kshetra Samachara
ಮನೆಯ ಕಿಟಕಿ ಗ್ರಿಲ್ ಮುರಿದು ಒಳಗೆ ನುಗ್ಗಿದ ದರೋಡೆಕೋರರು, ಮನೆ ಜನರ ಕೈ, ಕಾಲು ಕಟ್ಟಿ ಹಾಕಿ ಚಿನ್ನ ಮತ್ತು ಹಣ ದೋಚಿದ ಘಟನೆ ಇಲ್ಲಿನ ಕಲ್ಯಾಣನಗರದ 7ನೇ ಕ್ರಾಸ್ನಲ್ಲಿ ಗುರುವಾರ ಬೆಳಗಿನ ಜಾವ ನಡೆದಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಶಿವಾನಂದ ಹೊಂಬಳ ಎಂಬುವರ ಮನೆಯಲ್ಲಿ ದರೋಡೆ ನಡೆದಿದ್ದು, ಮನೆಯಲ್ಲಿದ್ದ 250 ಗ್ರಾಂ ಚಿನ್ನ ಮತ್ತು 25 ಸಾವಿರ ರೂಪಾಯಿ ಹಣ ದೋಚಿ ದುಷ್ಕರ್ವಿುಗಳು ಪರಾರಿಯಾಗಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ 7 ಜನರಿದ್ದ ದರೋಡೆಕೋರರ ತಂಡ, ಕಿಟಕಿಯ ಸರಳು ಮುರಿದು ಕಬ್ಬಿಣದ ರಾಡ್ ಮತ್ತಿತರ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿತ್ತು. ಶಬ್ಧ ಕೇಳಿ ಮನೆಯವರಿಗೆ ಎಚ್ಚರವಾಯಿತು. ನುಗ್ಗಿಬಂದ ದರೋಡೆಕೋರರು ಮನೆ ಮಾಲೀಕ ಶಿವಾನಂದ, ಪತ್ನಿ ಪ್ರೇಮಾ ಹಾಗೂ ಪುತ್ರಿ ಶ್ರೀವಚನಾ ಅವರ ಕೈ ಕಾಲು ಕಟ್ಟಿ, ಕೊಠಡಿಯೊಂದರಲ್ಲಿ ಕೂಡಿ ಹಾಕಿ ಕೂಗಿಕೊಳ್ಳದಂತೆ ಬೆದರಿಕೆ ಹಾಕಿದರಂತೆ.
ಮನೆ ಜನರ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡ ದರೋಡೆಕೋರರು, ಇಡೀ ಮನೆಯಲ್ಲಿ ಸರಸರನೆ ಹುಡುಕಾಡಿ ಚಿನ್ನ, ನಗದು ಎತ್ತಿಕೊಂಡು, ಬಾಗಿಲ ಮೂಲಕ ಪರಾರಿಯಾದರು.
ನಂತರ ಹಗ್ಗ ಬಿಚ್ಚಿಕೊಂಡ ಮನೆಯವರು ಕಿರುಚಿಕೊಂಡರು. ಎಚ್ಚರಗೊಂಡ ಅಕ್ಕಪಕ್ಕದವರು ಧಾವಿಸಿ ಬಂದು ವಿಷಯ ತಿಳಿದುಕೊಂಡರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ದರೋಡೆಕೋರರು ತಳ್ಳಿಕೊಂಡು ಹೋಗಿದ್ದರಿಂದ ಶ್ರೀವಚನಾಳ ಮೊಣಕೈ ಭಾಗದಲ್ಲಿ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ದಂಪತಿ ಹಾಗೂ ಅವರ ಪುತ್ರಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ದರೋಡೆಕೋರರು ಮುಖ ಮುಚ್ಚಿಕೊಂಡಿದ್ದು, ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಡಿಸಿಪಿ ಬಿ.ಎಸ್. ನೇಮಗೌಡ, ಎಸಿಪಿ ಎಂ.ಎನ್. ರುದ್ರಪ್ಪ, ಇನ್ಸ್ಪೆಕ್ಟರ್ ರಮಾಕಾಂತ, ಬೆರಳಚ್ಚು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದರು. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತಿಪರ ದರೋಡೆಕೋರರ ಕೃತ್ಯವೆಂದು ಶಂಕಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.