Kshetra Samachara
ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡು ಹುಬ್ಬಳ್ಳಿ- ಧಾರವಾಡ, ಕಾರವಾರ, ಗೋಕರ್ಣ ಓಂ ಬೀಚ್ಗೆ ಸರಬರಾಜು ಮಾಡುತ್ತಿದ್ದ ಗಾಂಜಾ ಕಿಂಗ್ಪಿನ್ ನೇಕಾರ ನಗರ ನಿವಾಸಿ ತೌಸೀಫ ಸುರ್ದಜಿ (28) ಹಾಗೂ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಮುನಾಫ ಅದಮಸಾಬ ಮುಲ್ಲಾ (57)ನನ್ನು ಬೆಂಡಿಗೇರಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸೆ. 11ರಂದು ರೈಲಿನ ಮೂಲಕ ವಿಶಾಖಪಟ್ಟಣದಿಂದ ಹುಬ್ಬಳ್ಳಿಗೆ ಗಾಂಜಾ ಸರಬರಾಜು ಮಾಡುವ ವೇಳೆ ಆಂಧ್ರ ಮೂಲದ ಮೂವರು ಆರೋಪಿಗಳು ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿದ್ದರು. ಅವರಿಂದ ಲಕ್ಷ ರೂ. ಮೌಲ್ಯದ 20 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಗಾಂಜಾ ತಂದು ತೌಸೀಫನಿಗೆ ಮಾರಾಟ ಮಾಡಲೆಂದು ಬಂದಿದ್ದಾಗಿ ಬಾಯಿ ಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ತೌಸೀಫನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಹಳೇ ಹುಬ್ಬಳ್ಳಿ ಅರವಿಂದ ನಗರದ ಸರ್ಫರಾಜ ಜಮಾದಾರ ತಲೆಮರೆಸಿಕೊಂಡಿದ್ದಾನೆ ಎಂದು ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಸಂತೋಷಕುಮಾರ ತಿಳಿಸಿದ್ದಾರೆ.
ಗಾಂಜಾ ಸಾಮ್ರಾಜ್ಯ ಸ್ಥಾಪಿಸಿದ್ದ: ಮೂರ್ನಾಲ್ಕು ವರ್ಷಗಳಿಂದ ಗಾಂಜಾ ಮಾರಾಟವನ್ನೇ ಕಸುಬಾಗಿಸಿಕೊಂಡಿದ್ದ ತೌಸೀಫ ಸುಲಭವಾಗಿ ಗಾಂಜಾ ಸಾಮ್ರಾಜ್ಯ ಕಟ್ಟಿಕೊಂಡಿದ್ದ. ನಕ್ಸಲೈಟ್ ಪ್ರದೇಶಗಳಲ್ಲಿ ಬೆಳೆಯುವ ಗಾಂಜಾವನ್ನು ತೌಫೀಕ್ ಖರೀದಿಸುತ್ತಿದ್ದ. ಬಳಿಕ ಸ್ಥಳೀಯ ಸಾಗಣೆದಾರರ ಸಹಾಯದಿಂದ ರೈಲಿನಲ್ಲಿ ಹುಬ್ಬಳ್ಳಿಗೆ ತರಿಸಿಕೊಳ್ಳುತ್ತಿದ್ದ. ನಂತರ ಕಾರವಾರ, ಗೋಕರ್ಣದ ಓಂ ಬೀಚ್, ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಗ್ರಾಮೀಣ ಪ್ರದೇಶಗಳು ಸೇರಿ ಹಲವೆಡೆಗೆ ಕಳುಹಿಸಿ ಕೊಡುತ್ತಿದ್ದ.
ಹೆಚ್ಚು ಬೆಲೆಗೆ ಮಾರಾಟ: ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ತೌಸೀಫ ಕರ್ನಾಟಕದಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. 2 ಕೆಜಿ ಪಾಕೆಟ್ಗೆ 15 ಸಾವಿರ ರೂ.ಗೆ ಖರೀದಿಸಿ 30, 40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. 100, 500 ಗ್ರಾಂ ಪಾಕೆಟ್ಗಳನ್ನಾಗಿ ಮಾಡಿ 500, 1000 ರೂ.ಗೆ ಮಾರಾಟ ಮಾಡುತ್ತಿದ್ದ.
ಕಾಲೇಜು ಹುಡುಗರೇ ಟಾರ್ಗೆಟ್: ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ ನಿರ್ದಿಷ್ಟ ವಿದ್ಯಾರ್ಥಿಗಳಿಗೆ ತೌಸೀಫ ಗಾಂಜಾ ಸರಬರಾಜು ಮಾಡುತ್ತಿದ್ದ. ಮೊದಲು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳು ಗಾಂಜಾ ನಶೆಗೆ ಅಡಿಕ್ಟ್ ಆದ ಬಳಿಕ ಹೆಚ್ಚು ಹಣಕ್ಕೆ ಡಿಮಾಂಡ್ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.