ER NEWS
ಗುಜರಾತ್ ವಿಧಾನಸಭೆ ಇಂದು ಅಕ್ಷರಶಃ ರಣರಂಗವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ ನಡೆದು ಕೆಲವರು ಗಾಯಗೊಂಡರು. ಘರ್ಷಣೆ ವೇಳೆ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ ಶಾಸಕರೊಬ್ಬರಿಗೆ ಬೆಲ್ಟ್ನಿಂದ ಹಲ್ಲೆ ಮಾಡಿದರು. ಈ ಘಟನೆ ನಂತರ ಎರಡೂ ಪಕ್ಷದ ಸದಸ್ಯರ ನಡುವೆ ಹೊಡೆದಾಟ ನಡೆಯಿತು. ಈ ಸಂಬಂಧ ಕಾಂಗ್ರೆಸ್ ಶಾಸಕನನ್ನು ಇಡೀ ಕಲಾಪದ ಅವಧಿಗೆ ಅಮಾನತುಗೊಳಿಸಲಾಗಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ವಿಕ್ರಮ್ ಮಾದಮ್ ಮಾತನಾಡಲು ಸ್ಪೀಕರ್ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ಶಾಸಕ ಅಮ್ರೀಶ್ ದೇರ್ ಈ ಸಂದರ್ಭ ವಿಕ್ರಮ್ ಮಾದಮ್ ರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದು, ವಿಕ್ರಮ್ ರನ್ನು ಸ್ಪೀಕರ್ ಅಮಾನತುಗೊಳಿಸಿದರು. ಇದೇ ಸಂದರ್ಭ ಬಿಜೆಪಿ ಶಾಸಕ ಜಗದೀಶ್ ಪಂಚಾಲ್ ಮಾತುಗಳಿಂದ ಕೆರಳಿದ ದೇರ್ ಸದನದ ಬಾವಿಯೆಡೆಗೆ ಧಾವಿಸಿದರು. ಅವರಿಗೆ ಜೊತೆಯಾದ ಕಾಂಗ್ರೆಸ್ ಶಾಸಕ ಪ್ರತಾಪ್ ದೂಧತ್ ಮೈಕ್ ಕಿತ್ತು ಪಂಚಾಲ್ ಮೇಲೆ ಎಸೆದರು. ತಾನು ದೇರ್ ವಿರುದ್ಧ ಮಾತನಾಡಿರಲಿಲ್ಲ ಎಂದು ಪಂಚಾಲ್ ಹೇಳಿದ್ದರೆ, ಬಿಜೆಪಿ ಶಾಸಕ ದೇರ್ ರನ್ನು ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಆರೋಪಿಸಿದ್ದಾರೆ.